ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಕಾವ್ಯದ ನಿರ್ಲಕ್ಷ್ಯ: ಡಿ.ಎಸ್.ಶ್ರೀಧರ

ಲೇಖಕರು : ವಿಜಯ ಕರ್ನಾಟಕ
ಶನಿವಾರ, ಜನವರಿ 16 , 2016
ಜನವರಿ 16, 2016

ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಕಾವ್ಯದ ನಿರ್ಲಕ್ಷ್ಯ: ಡಿ.ಎಸ್.ಶ್ರೀಧರ

ಶಿವಮೊಗ್ಗ : ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷ ಕಾವ್ಯದ ಕುರಿತು ತೀರಾ ನಿರ್ಲಕ್ಷ್ಯವಾದದು ಸ್ಪಷ್ಟವಿದ್ದು ಅದು ಇಂದಿಗೂ ಮುಂದುವರಿದಿದೆ ಎಂದು 11ನೇ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ 2016ರ ಅಧ್ಯಕ್ಷ ಡಿ.ಎಸ್.ಶ್ರೀಧರ ಹೇಳಿದರು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಹಾಗೂ ಜಿಲ್ಲೆಯ ಎಲ್ಲಾ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನದ ಸಮ್ಮೇಳನದಲ್ಲಿ ಮಾತನಾಡಿದರು.

ಪಂಡಿತ ಕವಿಗಳ ಕಾಲದಲ್ಲಿ ರಂಗಕೃತಿಗಳಾದ ಯಕ್ಷಗಾನ ಪ್ರೌಢ ಕೃತಿಗಳಲ್ಲ ಎಂದು ನಿರ್ಲಕ್ಷಿಸಲಾಯಿತು. ಯಕ್ಷಗಾನದ ಕವಿಗಳು ಪ್ರಚಾರ ಬಯಸಲಿಲ್ಲ. ಆದರೆ ಸಾಹಿತ್ಯ ರಚನೆ ಸಂದರ್ಭದಲ್ಲಿ ಅವರ ಹೆಸರನ್ನು ಕೃತಿಯೊಂದಿಗೆ ನಮೂದಿಸುವ ಸೌಜನ್ಯ ಯಾರಿಗೂ ಬಾರದಿರುವುದು ದುರಂತ ಎಂದರು.

ಯಕ್ಷಗಾನ ವಲಯದ ಹೊರಗಿನವರು ಈ ಕಲೆಗೆ ಅಪರಿಚಿತರಾದುದರಿಂದಲೋ, ಸರಿಯಾಗಿ ತಿಳಿಸುವವರ ದೊರೆಯದ ಕಾರಣಕ್ಕೋ ನಿರ್ಲಕ್ಷಿಸಿರಬಹುದು. ಆದರೆ ಯಕ್ಷಗಾನದ ವಯಲದೊಳಗೆ ಇರುವ ಸಾಹಿತ್ಯಾಸಕ್ತರು, ಸಾಹಿತ್ಯ ಸಂಘಟನೆಗಳು ನಿರ್ಲಕ್ಷಿಸಿದ್ದು ಸರಿಯಲ್ಲ. ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲೂ ಯಕ್ಷ ಸಾಹಿತ್ಯ ಪ್ರಸ್ತಾಪವಾದ್ದು ಕಡಿಮೆ. ಇನ್ನು ಮೇಳಗಳಲ್ಲಿ ಕೊನೆಯ ಪ್ರಯೋಗವಾಗಿರುತ್ತದೆ. ಪ್ರಸಂಗದ ಹೆಸರು ಮಾತ್ರ ಇರುತ್ತದೆ. ರಚಯಿತನ ಹೆಸರು ಎಲ್ಲೂ ಕಾಣದು. ಇಂದಿಗೂ ಬಹಳಷ್ಟು ಕಲಾವಿದರಿಗೆ ತಾವು ಅಭಿನಯಿಸುತ್ತಿರುವ, ಹಾಡುತ್ತಿರುವ ಪದ್ಯಗಳ ಕವಿ ಯಾರು ಎಂಬುದು ತಿಳಿದೇ ಇಲ್ಲ. ಮುದ್ರಿತ ಪ್ರಸಂಗಗಳಲ್ಲೂ ಕವಿಯ ಹೆಸರಿಲ್ಲದಿರುವುದು ಘೋರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ತಮಗೆ ಬೇಕಾದಷ್ಟೇ ಭಾಗವನ್ನು ಸಂಗ್ರಹಿಸಿ ಪ್ರಕಟಿಸುವ ಚಾಳಿ ಬೆಳೆದಿದ್ದು ಅಲ್ಲೂ ಮೂಲ ಕವಿಗಳ ಹೆಸರು ಕಾಣಿಸುವುದಿಲ್ಲ. ಸಂಪಾದಕರ ಹೆಸರಿನಲ್ಲೇ ಪ್ರಸಂಗಗಳೂ ಸ್ಥಾಪಿತವಾಗಿಬಿಟ್ಟಿವೆ. ಹಿಂದಿನಿಂದಲೂ ಭಾಗವತರು ತಮಗೆ ಬೇಕಾದಷ್ಟೇ ಭಾಗವನ್ನು ಹಸ್ತಪ್ರತಿಯಲ್ಲಿ ಬರೆದಿಟ್ಟುಕೊಂಡು ಹಾಡುತ್ತಿದ್ದುದರಿಂದ ಕವಿಪರಿಚಯದ ಭಾಗ ಲುಪ್ತವಾಗಿ ಕೃತಿಯ ಕವಿ ಅಜ್ಞಾತನಾಗಿ ಬಿಟ್ಟಿದ್ದಾನೆ. ಈಗಲೂ ಜೆರಾಕ್ಸ್ ಮಾಡಿಸುವಾಗ ಪ್ರದರ್ಶನದ ಪಠ್ಯದ ಭಾಗವನ್ನು ಮಾತ್ರ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮಾತನಾಡಿ, ಯಕ್ಷಗಾನ ಕಲೆಯ ಸ್ಥಿತಿ ಹಿಂದಿಗಿಂತ ಇಂದು ಚೆನ್ನಾಗಿದೆ ಎಂದು ಕಂಡುಬಂದರೂ ಎಷ್ಟು ಜನ ಎಳೆಯರು ಇದನ್ನು ಕಲಿಯಲು ಮುಂದೆ ಬರುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ನಿರೀಕ್ಷಿತ ಮಟ್ಟಕ್ಕೆ ಈ ಕಲೆಯನ್ನು ಕಲಿಯಲು ಮುಂದೆ ಬಾರದಿರುವುದಕ್ಕೆ ಯಕ್ಷಗಾನ ಕಲಾವಿದರಿಂದ, ಭಾಗವತರಿಗೆ ಸರಕಾರದಿಂದ ಮನ್ನಣೆ, ಪ್ರೋತ್ಸಾಹ, ನಿವೃತ್ತಿ ವೇತನ ಮತ್ತಿತರ ಸೌಕರ್ಯ ಇಲ್ಲದಿರುವುದೇ ಕಾರಣ. ನಿವೃತ್ತಿ ನಂತರ ಬದುಕಿಗೆ ಏನು ಮಾಡಬೇಕು ಎಂಬ ಆತಂಕ ಅರ್ಥದಾರಿ, ಕಲಾವಿದ ಮತ್ತು ಸಂಗೀತ ವಾದಕನಿಗೆ ಕಾಡುತ್ತಿದೆ ಎಂದರು.

ಯಕ್ಷಗಾನವನ್ನು ಹವ್ಯಾಸಕ್ಕಾಗಿ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ. ಹವ್ಯಾಸಿ ಕಲಾವಿದರಿಂದ ಉಳಿದು ಬೆಳೆಯುತ್ತಿದೆ. ಹೀಗಾಗಿ ಹವ್ಯಾಸಿ ಕಲಾವಿದರು ಹೆಚ್ಚಿನ ಅಭ್ಯಾಸದ ಕಡೆಗೆ ಗಮನ ಹರಿಸಬೇಕು. ಶಾಲೆ ಪಠ್ಯ ಪುಸ್ತಕದಲ್ಲಿ ಯಕ್ಷಗಾನದ ಪ್ರಸಂಗವೊಂದನ್ನು ಸೇರ್ಪಡೆ ಮಾಡಿ ಯುವ ಜನತೆಯಲ್ಲಿ ಇದರ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.

ಆಶಯ ಭಾಷಣ ಮಾಡಿದ ವಿದ್ವಾನ್ ದತ್ತಮೂರ್ತಿ ಭಟ್, ವಾಚಕ ಮತ್ತು ಅಭಿನಯದಲ್ಲಿ ಜಾತಿ ಬೇಧ ಇಲ್ಲದಿರುವುದು ಯಕ್ಷಗಾನದಲ್ಲಿ ಮಾತ್ರ. ಜತೆಗೆ ವಿದ್ಯೆ ಇಲ್ಲದವರೂ ಇದರಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಕಂಬಗಳ ನಡುವೆ ಜಗತ್ತನ್ನೇ ತೋರಿಸುವ ಶಕ್ತಿ ಹೊಂದಿರುವ ಯಕ್ಷಗಾನದ ಉಳಿವು ಮತ್ತು ಅಭಿವೃದ್ಧಿಗೆ ಯಕ್ಷಗಾನ ವಿಶ್ವವಿದ್ಯಾಲಯ ಸ್ಥಾಪನೆಯ ಅಗತ್ಯ ಇದೆ. ಈ ಮೂಲಕ ಸಮಾಜದ ಎಲ್ಲಾ ಸ್ತರದ ಜನರ ಮನೆ ಬಾಗಿಲಿಗೆ ಯಕ್ಷಗಾನವನ್ನು ಕೊಂಡೊಯ್ಯಬೇಕಿದೆ ಎಂದರು. ಚಿತ್ರದುರ್ಗ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು.

ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಪಂ ಅಧ್ಯಕ್ಷ ಕಲಗೋಡು ರತ್ನಾಕರ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಬಿ.ಗಣಪತಿ, ಹಿರಿಯ ಯಕ್ಷಗಾನ ಕಲಾವಿದರಾದ ನಂದಳಿಕೆ ಬಾಲಚಂದ್ರರಾವ್ ಮತ್ತು ಎಂ.ಕೆ.ರಮೇಶ್ ಆಚಾರ್ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ಪಂಜಾಜೆ ಉಪಸ್ಥಿತರಿದ್ದರು.ಯು.ಮಧುಸೂದನ ಐತಾಳ ಸ್ವಾಗತಿಸಿದರು. ಎಚ್.ಗುರುನಂದನ್ ಮತ್ತು ಸಿ.ಪಾಂಡುರಂಗರಾವ್ ನಿರೂಪಿಸಿದರು.



ಕೃಪೆ : vijaykarnataka


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ